ಕಾಸರಗೋಡು, ಜ 09: ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜು ವಿದ್ಯಾರ್ಥಿನಿ ಪೆರುಂಬಳ ಬೇನೂರಿನ ಅಂಬಿಕಾ ಅವರ ಪುತ್ರಿ ಅಂಜುಶ್ರೀ (19) ಸಾವಿಗೆ ವಿಷಾಹಾರ ಕಾರಣವಲ್ಲ ಎಂದು ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ತಿಳಿಸಿದೆ.
ಕರುಳಿನ ನಿಷ್ಕ್ರಿಯತೆ ಹಾಗೂ ಜಾಂಡೀಸ್ನಿಂದಲೂ ಬಳಲುತ್ತಿದ್ದರು ಎಂದು ವರದಿಯಲ್ಲಿ ಹೇಳಿದೆ. ಹೆಚ್ಚಿನ ತನಿಖೆಗಾಗಿ ಅವರ ಆಂತರಿಕ ಅವಯವಗಳನ್ನು ರಾಸಾಯನಿಕ ಪರೀಕ್ಷೆಗೆ ಕಳುಹಿಸಲಾಗಿದೆ.
ಇದೇ ವೇಳೆ ಅಂಜುಶ್ರೀ ದೇಹದಲ್ಲಿ ವಿಷಾಂಶ ಪತ್ತೆಯಾಗಿದೆಯೆಂದೂ ವರದಿಯಲ್ಲಿ ಹೇಳಿದೆ.
ಆಹಾರದಲ್ಲಿನ ವಿಷ ಅಲ್ಲವೆಂದು ಫಾರೆನ್ಸಿಕ್ ಸರ್ಜನ್ ಅವರ ಅಭಿಪ್ರಾಯವಾಗಿದೆ. ವಿಷವು ಕರುಳನ್ನು ಕಾರ್ಯನಿರ್ವಹಿಸದಂತೆ ನಿಲ್ಲಿಸಿದೆ ಎಂದು ವರದಿ ತಿಳಿಸಿದೆ.
- Advertisement -
ಶನಿವಾರ ಬೆಳಗ್ಗೆ ಅಂಜುಶ್ರೀ ಮಂಗಳೂರಿನ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದರು. ಡಿ. 31ರಂದು ಕುಳಿಮಂದಿ ಸೇವಿಸಿದ ಕಾರಣ ಅಸ್ವಸ್ಥತೆ ಕಾಣಿಸಿಕೊಂಡಿತ್ತು. ವಿಷಾಹಾರ ಸೇವನೆಯಿಂದ ಸಾವು ಸಂಭವಿಸಿತ್ತೆಂದು ಸಂಶಯಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಹೊಟೇಲ್ ಮಾಲಕ ಸಹಿತ ಮೂವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.
ಈ ನಡುವೆ ಪತ್ತನಂತಿಟ್ಟ ಚಂದನಪಲ್ಲಿ ರೋಸ್ ಡೇಲ್ ಶಾಲೆಯ 13 ವಿದ್ಯಾರ್ಥಿಗಳು ಹಾಗೂ ಶಿಕ್ಷಕಿ ವಿಷಾಹಾರ ಸೇವನೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಾಲೆಯ ದಿನದ ನಿಮಿತ್ತ ನೀಡಲಾಗಿದ್ದ ಚಿಕನ್ ಬಿರಿಯಾನಿ ಸೇವಿಸಿದ್ದರು.
ಬೆಳಗ್ಗೆ 11 ಗಂಟೆಗೆ ವಿತರಿಸಿದ ಬಿರಿಯಾನಿಯನ್ನು ಸಂಜೆ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು ಎಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ. ಬಿರಿಯಾನಿ ತಿಂದ ಎಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಒಂದೇ ದಿನದಲ್ಲಿ ಯಾವುದೇ ಅನಾರೋಗ್ಯದ ಲಕ್ಷಣಗಳು ಕಂಡುಬಂದಿಲ್ಲ.
ಮರುದಿನ ಅವರೆಲ್ಲರೂ ಅಸ್ವಸ್ಥರಾದರು. ಅವರನ್ನು ಪತ್ತನಂತಿಟ್ಟದ ಮೂರು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.