ಚಾಮರಾಜನಗರ, ಫೆ.15: ಕೋಮು ಸೌಹಾರ್ದ ಕದಡುವ ಹಲವು ಘಟನೆಗಳು ಆಗಾಗ ನಡೆಯುತ್ತಲೇ ಇವೆ. ಆದರೆ, ಇದಕ್ಕೆ ಅಪವಾದವೆಂಬಂತೆ ಚಾಮರಾಜನಗರದ ಅಹಮದ್ ನಗರದಲ್ಲಿ ಕೋಮು ಸೌಹಾರ್ದತೆಯ ಮಾದರಿ ಕಾರ್ಯ ನಡೆದಿದೆ. ವಯಸ್ಸಾದ ಹಿಂದೂ ಮಹಿಳೆಯ ಅಂತ್ಯಕ್ರಿಯೆ ನಡೆಸಲು ಆಕೆಯ ಸಂಬಂಧಿಕರು ಅಥವಾ ಪ್ರದೇಶದ ಇತರ ಸಮುದಾಯದವರು ಯಾರೂ ಮುಂದೆ ಬರದ ಕಾರಣ ಮುಸ್ಲಿಂ ಯುವಕರು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು.
ಮೃತ ನಂಜಮ್ಮ ಅನ್ಯ ಜಾತಿಯ ವ್ಯಕ್ತಿಯನ್ನು ಮದುವೆಯಾಗಿದ್ದರು. ಹಾಗಾಗಿ ಅವಳ ಸಂಬಂಧಿಕರೆಲ್ಲ ಅವಳಿಂದ ಅಂತರ ಕಾಯ್ದುಕೊಳ್ಳುತ್ತಿದ್ದರು. ಆಕೆಯ ಪತಿ ಹಲವು ವರ್ಷಗಳ ಹಿಂದೆ ತೀರಿಕೊಂಡಿದ್ದರು. ಅಹ್ಮದ್ ನಗರದಲ್ಲಿ ಮಗಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ನಂಜಮ್ಮ ಅವರ ಮೊಮ್ಮಗಳ ಪತಿಯನ್ನು ಹೊರತುಪಡಿಸಿ, ಇತರ ಸಂಬಂಧಿಕರು ಅವರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲು ಕೈ ಜೋಡಿಸಲಿಲ್ಲ.
ವಿಷಯ ತಿಳಿದ ಸ್ಥಳೀಯ ಮುಸ್ಲಿಂ ಯುವಕರು ಮಾರುಕಟ್ಟೆಗೆ ತೆರಳಿ ಹಿಂದೂ ಸಂಪ್ರದಾಯದಂತೆ ನಂಜಮ್ಮ ಅವರ ಅಂತಿಮ ಸಂಸ್ಕಾರ ನಡೆಸಲು ಬೇಕಾದ ಸಾಮಾನುಗಳನ್ನು ತಂದು ಅಂತ್ಯಕ್ರಿಯೆ ನಡೆಸಿದರು. ಈ ಹಿಂದೆ ನಂಜಮ್ಮ ಅನಾರೋಗ್ಯದಿಂದ ಬಳಲುತ್ತಿದ್ದಾಗ ಈ ಯುವಕರು ಆರ್ಥಿಕ ಸಹಾಯ ಮಾಡುತ್ತಿದ್ದರು.